Monday 15 February 2016

ಹೀಗೊಂದು ಪಯಣ ..

ಜೋರಾಗಿ ಸದ್ದು ಮಾಡುತ್ತಿದ್ದ ಅಲಾರಾಮಿನ ರಿಂಗಣಕ್ಕೆ ಗಾಢವಾದ ನನ್ನ ನಿದ್ದೆಗೆ ಭಂಗವಾಗಿತ್ತು. ಗಡಿಯಾರದ ಮುಳ್ಳು 4 ಘಂಟೆ ತೋರಿಸುತಿತ್ತು. ಮಗ್ಗಲು ಹೊರಳಿಸುತ್ತಾ, ಕಣ್ಣುಜ್ಜುತ್ತಲೇ ನಿಧಾನವಾಗಿ ಎದ್ದೆ. ಕಣ್ಣಂಚಲ್ಲಿ ನಿದ್ರೆ ಕಾಣತ್ತಿದ್ದರೂ ಮನದೊಳಗಿನ ಉತ್ಸಾಹ ನನ್ನನ್ನು ಹಾಸಿಗೆಯಿಂದ ಏಳುವಂತೆ ಮಾಡಿತ್ತು. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವುದೆಂದು ಮೊದಲೇ ನಿಶ್ಚಯವಾಗಿತ್ತು.  ತರಾತುರಿಯಿಂದ ತಯಾರಾಗಿ ನನ್ನ ನಾಲ್ವರು ಗೆಳತಿಯರೊಡನೆ ,ಮೊದಲೇ ಗೊತ್ತು ಮಾಡಿದ್ದ ಕಾರಿಗಾಗಿ ಕಾಯುತ್ತಾ ನಿಂತೆ.ಸರಿ ಸುಮಾರು ೫ ಗಂಟೆಗೆ ನಮ್ಮ ಕಾರು ಬಂದು ಮನೆಯ ಬಾಗಿಲ
 ಬಳಿ ನಿಂತಿತು . ಹಾಡು ,ಮಾತುಕತೆಗಳ  ನಡುವೆ ಚುರುಗುಟ್ಟುತ್ತಿದ್ದ ಹೊಟ್ಟೆಗೆ ಸ್ವಲ್ಪ ತಿಂಡಿಯೂ ಆಯಿತು .ಬೆಂಗಳೂರಿನಿಂದ ಹೊರಟ  ನಮ್ಮ ಗಾಡಿಯು  ಮೈಸೂರನ್ನು ಸಾಗಿ ಗೋಪಾಲಸ್ವಾಮಿ ಬೆಟ್ಟದ ಮಡಿಲನ್ನು ತಲುಪಿತು. 

ಬೆಟ್ಟದ ತಪಲಿನಲ್ಲೇ ನಾವು ಕೊಂಡೊಯ್ದಿದ್ದ ಕಾರನ್ನು ನಿಲ್ಲಿಸುವಂತೆ ಅಲ್ಲಿನ ಜನ ಸೂಚಿಸಿದರು. ಅಲ್ಲಿಯೇ ಸರ್ಕಾರಿ ಬಸ್ಸುಗಳು ನಮಗಾಗಿ ಕಾಯುತ್ತ ನಿಂತಿದ್ದವು. ಹೋಗಿ ಹತ್ತಿ ಕುಳಿತೆವು. ಬೆಟ್ಟದ ತುದಿಗೆ ಸ್ವಂತ ವಾಹನ ಬಿಡುವುದಿಲ್ಲವೆಂದೂ, ಸರ್ಕಾರೀ ಬಸ್ಸುಗಳನ್ನೇ ಬಳಸಬೇಕೆಂದು ಅಲ್ಲಿನ ಜನರಿಂದ ತಿಳಿದು ಬಂತು. ಗೋಪಾಲ ಸ್ವಾಮಿ ಬೆಟ್ಟಕ್ಕೆ ಜನ ದಟ್ಟಣಿ ನೋಡಿಕೊಂಡು  ಪ್ರತಿ ಅರ್ಧ ಘಂಟೆಗೊಂದು ಬಸ್ಸು ಬಿಡುತ್ತಾರಂತೆ. ಬಸ್ಸಿನಲ್ಲಿ ಜನ ಸಂಧಣಿ ಹೆಚ್ಚುತ್ತಿದ್ದಂತೆ ಚಾಲಕ ಬಸ್ಸು ಚಲಿಸಲು ಆರಂಭಿಸಿದ. ಹೊರಡುವ ಮೊದಲೇ ಈ ಸ್ಥಳದ ಬಗ್ಗೆ ಓದಿದ್ದೆ. ಬಂಡೀಪುರ ಅಭಯಾರಣ್ಯದ ಹೃದಯ ಭಾಗದಲ್ಲಿರುವ ಈ ಬೆಟ್ಟ ೧೪೫೪ ಮೀ  ಎತ್ತರದಲ್ಲಿದೆ. ಇದು ಬಂಡೀಪುರ ಅರಣ್ಯದ ಅತಿ ಎತ್ತರದ ಪ್ರದೇಶವೂ ಹೌದು. ಇದನೆಲ್ಲಾ ನಾನು ಯೋಚಿಸಿ ತಾಳೆ ಹಾಕುತ್ತಿದ್ದಗಲೇ ಶ್ರುತಿ ನನ್ನನ್ನು ತಟ್ಟಿ ಕಿಟಕಿಯಿಂದಾಚೆ  ನೋಡುವಂತೆ ಸೂಚನೆ ಕೊಟ್ಟಳು.ಹೊರನೋಡಿದಾಗ ಕಂಡದ್ದು ಪ್ರಕೃತಿಯ ವಿಹಂಗಮ ನೋಟ.  ನಮ್ಮ ಬಸ್ಸು ನಿಧಾನವಾಗಿ ಘಾಟಿಯನ್ನು ಸಾಗುತ್ತಿತ್ತು .ಬಳುಕುತ್ತಾ ಸಾಗುವ ರಸ್ತೆಯ ಅಂಚಿನಲ್ಲೇ ಸಾಲು ಸಾಲು ಮರಗಳು.  ಸುತ್ತಲೂ ಹಸಿರು, ತಂಪಾದ ಗಾಳಿ. ಬೆಂಗಳೂರಿನ ಹೊಗೆ ಕುಡಿದು ಬದುಕುತ್ತಿದ್ದ ನಮಗೆ ನಿರ್ಮಲವಾದ ಗಾಳಿಯು ಉಲ್ಲಾಸ ನೀಡಿತ್ತು. ಬಂಡೀಪುರ ಅಭಯಾರಣ್ಯದ ಆನೆಗಳು ಇಲ್ಲಿ ಸುಳಿದಾಡುತ್ತವೆ ಎಂದು ಕೇಳಿದ್ದೆ, ಕಾಣುತ್ತವೆಯೇನೋ ಎಂಬ ಆಸೆಯಿಂದ ಕತ್ತು ಇಣುಕಿಸಿ ನೋಡಿದೆ. ನಿರಾಶೆಯಿಂದ ಬಸ್ಸಿನಲ್ಲಿದ್ದ ಜನರತ್ತ ದೃಷ್ಟಿ ಹಾಯಿಸಿದೆ.ಎಲ್ಲರ ಕಣ್ಣಲ್ಲೂ ಉತ್ಸಾಹ, ಭಕ್ತಿ  ಬೇಡಿಕೆಗಳು ಕಂಡವು. ಅಷ್ಟರಲ್ಲಿ ದೇವಸ್ಥಾನದ ಗೋಪುರದ ತುದಿ ಕಾಣ ತೊಡಗಿತು . ಹತ್ತಿರ ಬಂದೆವೇನೋ ಎಂದು ಇಳಿಯಲು ಸಿದ್ಧವಾದೆವು. 

ಬಸ್ಸು ಇಳಿಯುತ್ತಿದ್ದಂತೆ ನಮಗೆ ಕಂಡದ್ದು ಸುಂದರವಾದ ಸುವರ್ಣ ರಂಗಿನ ಗೋಪಾಲಸ್ವಾಮಿ ದೇವಾಲಯ. ಸದಾ ಮಂಜು ಮಿಶ್ರಿತವಾಗಿರುವುದಕ್ಕೋ ಏನೋ ಇದನ್ನು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಅನ್ನುತಾರೆ.ಚಾಮರಾಜನಗರ ಜಿಲ್ಲೆಯಲ್ಲಿರುವ ಈ ದೇವಾಲಯವು ಸರಿ ಸುಮಾರು ೧೩೧೫ರಲ್ಲಿ ಹೊಯ್ಸಳರ ಎರಡನೇ ಬಲ್ಲಾಳನಿಂದ ಸ್ಥಾಪಿತವಯಿತಂತೆ. ನಂತರ ವೇಣುಗೋಪಾಲನ ಭಕ್ತರಾಗಿದ್ದ ಮೈಸೂರಿನ ಒಡೆಯರು ಇದನ್ನು ವ್ಯವಸ್ಥಿತವಾಗಿ ರೂಪಿಸಿ ನೋಡಿಕೊಂಡು ಹೊದರಂತೆ.ದೇವಾಲಯದ ಗರ್ಭಗೃಹದಲ್ಲಿ ಶ್ರೀಕೃಷ್ಣನ ಮೂರ್ತಿಯಿದೆ.  ಪಿಳ್ಳಂಗೋವಿಯ ಚೆಲುವ ಕೃಷ್ಣನಿಗೆ ಅಂದು ಬೆಣ್ಣೆಯ ಅಲಂಕಾರ. ದೇವಾಲಯದ ಸುತ್ತಲೂ ಬಹಳಷ್ಟು ಕೊಳ್ಳಗಳಿವೆ. ಅಲ್ಲಿನ ಅರ್ಚಕರು ಹೇಳಿದ ಕತೆಯ ಪ್ರಕಾರ ದೇವಸ್ಥಾನದ ಸುತ್ತಲೂ ೭೭ ಕೊಳ್ಳಗಳಿವೆ. ಅಲ್ಲಿ ಕಾಗೆಯೊಂದು ಕೊಳ್ಳದಲ್ಲಿ ಮಿಂದು ಹಂಸವಾಯಿತಂತೆ  ಅದಕ್ಕೇ  ಹಂಸತೀರ್ಥವೆಂದು ಈ ಕೊಳ್ಳಗಳನ್ನು ಕರೆಯುತ್ತಾರೆ. ನನಗನ್ನಿಸಿದ ಹಾಗೆ ಹಿಂದೊಂದು ಕಾಲದಲ್ಲಿ ಈ ಕೊಳಗಳಲ್ಲಿ ಬಹಳಷ್ಟು ಹಂಸಗಳಿದ್ದಿರಬಹುದು.ಅದರಿಂದಲೇ ಹಂಸತೀರ್ಥ ಎಂಬ ಹೆಸರು ಬಂದಿರಬಹುದು.ದೇವಸ್ಥಾನದ ಸುತ್ತಲೂ ಹಸಿರಿನ ಸೆರಗು ಹಾಸಿದೆ. ಮಧುಮಲೈ ಮತ್ತು ನೀಲಗಿರಿ ಶ್ರೇಣಿಗಳು ಬೆಟ್ಟದ ಸುತ್ತಲೂ ಹರಡಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ.ಕಣ್ಣು ಹಾಯಿಸಿದಷ್ಟೂ ಹಸಿರು ,ಮನದೊಳಗೆ ಏನೋ ನೆಮ್ಮದಿ. ಆ ಬೆಟ್ಟ ಶ್ರೇಣಿಗಳ ನಡುವೆ ನಾನೂ ಒಬ್ಬ ಸ್ವಚ್ಚಂದದಿ ಹಾರುವ  ಹಕ್ಕಿಯಾಗಿ ಕಳೆದು ಹೋಗಿದ್ದೆ. ಅಷ್ಟರಲ್ಲಿ "ಸೆಲ್ಫಿ ತೆಗೆಯೋಣ ಬಾ " ಎಂದು ದೀಪಾ ಕರೆದಾಗಲೇ ನಾನು ವಾಸ್ತವಕ್ಕೆ ಬಂದಿದ್ದು . ಸೆಲ್ಫೀಗೊಂದು ಪೋಸು ನೀಡಿ  ದೇವಸ್ಥಾನವನ್ನು  ಇನ್ನೊಮ್ಮೆ  ಸುತ್ತಿ ಬಂದು ಮತ್ತೆ ಫೋಟೋ  ಕ್ಲಿಕ್ಕಿಸತೊಡಗಿದೆವು.ಅಷ್ಟರಲ್ಲಿ ಎರಡನೆಯ ಬಸ್ಸೂ ಸಹ ಹೊರಡುವ ಸಮಯವಾಗಿತ್ತು. ನಾವು  ಬಂದ ಬಸ್ಸು ಕೇವಲ ಅರ್ಧ ಗಂಟೆ ಮಾತ್ರ ಅಲ್ಲಿ ನಿಲ್ಲುವುದು. ಅದೇ ಬಸ್ಸಿನಲ್ಲಿ ಹಿಂದಿರುಗ ಬೇಕು ಎಂಬ ಕಡ್ದಾಯವೇನೂ ಇಲ್ಲ. ಹಾಗಾಗಿಯೇ ನಾವು ನಿಸರ್ಗದ ಸವಿಯನ್ನು ಇನ್ನಷ್ಟು ಸವಿದು ಎರಡನೇ ಬಸ್ಸಿಗೆ ಹಿಂದಿರುಗಿದೆವು. ಬೆಟ್ಟದ ತಪ್ಪಲನ್ನು ತಲುಪುವಾಗ ಘಂಟೆ ಮಧ್ಯಾಹ್ನ ೧ ಆಗಿತ್ತು.ನಮ್ಮ ಕಾರು ನಮಗಾಗಿ ಕಾಯುತ್ತ ನಿಂತಿತ್ತು.

 ಹೇಳುವುದನ್ನು ಮರೆತೆ ,ಈ  ಸ್ಥಳದ ಇನ್ನೊಂದು ಅಚ್ಚರಿ ಎಂದರೆ ಇಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ. ಹಾಗಗಿಯೋ  ಏನೋ ದೇವಾಲಯದ ಆಸುಪಾಸಿನ ಸ್ಥಳವೂ ಸ್ವಚ್ಚವಾಗಿತ್ತು. ಸ್ವಂತ ವಾಹನದ ಓಡಾಟ ನಿಷೇಧ ,ಪ್ಲಾಸ್ಟಿಕ್ ಬಳಕೆ ನಿಷೇಧ, ಇವುಗಳಿಂದಾಗಿಯೇ  ಈ ಸ್ಥಳ ಶಾಂತಿಯುತವಾಗಿ ಆಧುನಿಕತೆಯಿಂದ ದೂರವಾಗಿ ಮನಸ್ಸಿಗೆ ಹತ್ತಿರವಿತ್ತು. ನಿಧಾನವಾಗಿ ಒಬ್ಬೊಬ್ಬರಾಗಿಯೇ  ಕಾರನ್ನು ಏರಿ ಕುಳಿತೆವು. ಗೋಪಾಲಸ್ವಾಮಿ ಬೆಟ್ಟಕ್ಕೊಂದು ಶುಭವಿದಾಯ ಹೇಳಿ ನಮ್ಮ ಕಾರು ಬೆಂಗಳೂರಿನತ್ತ ಮುಖ ಮಾಡಿತು.

No comments:

Post a Comment